ಭಗವಾನ್ ಶಾಂತಿನಾಥ ಬಸದಿ, ನಿಡಗಲ್ ಇದು ಕರ್ನಾಟಕದ ಪುರಾತನ ಬಸದಿಗಳಲ್ಲಿ ಒಂದಾಗಿದೆ. == ಸ್ಥಳ == ಇದು ಬೆಳ್ತಂಗಡಿ ತಾಲೂಕಿನಲ್ಲಿ ಇರುವ ಪ್ರಸಿದ್ಧ ಬಸದಿಗಳಲ್ಲಿ ಒಂದಾಗಿದ್ದು, ಬೆಳ್ತಂಗಡಿಯಿಂದ ಉಜಿರೆಯ ಮೂಲಕ ಚಾರ್ಮಾಡಿಗೆ ಹೋಗುವ ಹೆದ್ದಾರಿಯಲ್ಲಿ, ಉಜಿರೆಯಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿರುವ ನಿಡಿಗಲ್ ಎಂಬ ಸ್ಥಳದಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಸೇತುವೆ ಪಕ್ಕದಲ್ಲಿ ಎಡಭಾಗಕ್ಕೆ ಇದೆ. ಈ ಬಸದಿಯು ಕಲ್ಕಂಜ ಗ್ರಾಮದಲ್ಲಿದೆ. ಹಾಗೆಯೇ ಇಲ್ಲಿಗೆ ಹೋಗಲು ಸಾಕಷ್ಟು ಸಾರ್ವಜನಿಕ ಬಸ್, ಜೀಪ್, ಆಟೋಗಳು ಮುಂತಾದ ಎಲ್ಲ ವಾಹನ ಸೌಲಭ್ಯವಿದೆ. ಪ್ರಶಾಂತವಾದ ವಾತಾವರಣದಲ್ಲಿ ನದಿಯ ದಡದ ಪಕ್ಕದಲ್ಲಿ ನಿರ್ಮಿಸಲಾಗಿದೆ. == ಆವರಣ == ಬಸದಿಯ ಗಂಧಕುಟಿಯಲ್ಲಿ ಶ್ರುತ, ಗಣಧರ ಪಾದ, ಚೌವೀಸ ತೀರ್ಥಂಕರರು ಸರ್ವಾಹ್ಣ ಯಕ್ಷ ಮತ್ತು ಬಾಹುಬಲಿಯ ಮೂರ್ತಿಗಳು ಇವೆ. ಅವುಗಳಲ್ಲಿ ಯಾವುದೇ ರೀತಿಯ ಬೆಳವಣಿಗೆಗಳು ಇಲ್ಲ. ಈ ಮೂರ್ತಿಗಳ ಪೈಕಿ ತೀರ್ಥಂಕರರ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ. ಪಾರ್ಶ್ವನಾಥ ಸ್ವಾಮಿ, ಶಾಂತಿನಾಥ ಸ್ವಾಮಿ ಮತ್ತು ಅನಂತನಾಥಸ್ವಾಮಿಗೆ ನೋಂಪಿ ನೆಡೆಸಿ ಉಧ್ಯಾಪನೆ ಮಾಡಲಾಗಿದೆಯಂತೆ.ಇಲ್ಲಿ ಪದ್ಮಾವತಿ ಅಮ್ಮನವರ ಮೂರ್ತಿಯಿದೆ. ಈ ಮೂರ್ತಿಯು ಕಂಚಿನದ್ದಾಗಿದ್ದು, ದೇವಕೋಷ್ಟಕದಲ್ಲಿ ಸ್ಥಾಪಿಸಲಾಗಿದೆ. ಪದ್ಮಾವತಿ ಅಮ್ಮನವರ ಮೂರ್ತಿಯು ಮೂಲಸ್ವಾಮಿಯ ಎಡಗಡೆಗೆ ಅಂದರೆ ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಅಮ್ಮನವರು ಸೀರೆ, ಬಳೆ, ಕುಂಕುಮ ಅರಸಿನ ಇತ್ಯಾದಿಗಳಿಂದ ಶೃಂಗರಿಸಲಾಗುತ್ತದೆ. ಶುಕ್ರವಾರ ಮತ್ತು ಮಂಗಳವಾರದಂದು ವಿಶೇಷ ಪೂಜೆ ನೆರವೇರುತ್ತದೆ. ಈ ದಿನಗಳಲ್ಲಿ ಪೂಜೆಯನ್ನು ಮಾಡುವಾಗ ಅಪ್ಪ, ಚಕ್ಕುಲಿ, ಫಲವಸ್ತುಗಳನ್ನು ಅಮ್ಮನವರಿಗೆ ಸಮರ್ಪಿಸಲಾಗುತ್ತದೆ. ಈ ಬಸದಿಯ ಗರ್ಭಗೃಹ ದಿಂದ ಹೊರಗೆ ಬರುತ್ತಿರುವಂತೆ ೫ ದ್ವಾರಗಳನ್ನು ಗಮನಿಸಬಹುದು. ಇದನ್ನು ಪಂಚ ದ್ವಾರ ಎಂಬುದಾಗಿ ಕರೆಯಲಾಗುತ್ತದೆ. ಘಂಟಾ ಮಂಟಪ ಅಥವಾ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿವೆ. ಇವುಗಳ ಮೇಲೆ ಮಹಾವೀರ ಚಕ್ರದ ಆಕೃತಿ ಇದೆ. ಆದರೆ ಗೋಡೆಗಳ ಮೇಲೆ ಯಾವುದೇ ಚಿತ್ರಗಳಿಲ್ಲ. ಇಲ್ಲಿನ ನೆಲವು ಕಾವಿಬಣ್ಣದಿಂದ ಕೂಡಿದ್ದು ಇದರ ಹೊರಗಿರುವ ಜಗುಲಿ ಕೂಡ ಕಾವಿ ನೆಲವಾಗಿದೆ. ಇಲ್ಲಿ ದ್ವಾರಪಾಲಕರ ಶಿಲಾ ಕೃತಿಗಳನ್ನು ಕಾಣಬಹುದು. ಹಾಗೆಯೇ ಇದರ ಪಂಚಾಂಗದ ಒಂದು ಬದಿಯಲ್ಲಿ ಜೀರ್ಣೋದ್ಧಾರ ಮಾಡಿದ ಮಾಹಿತಿಯ ಫಲಕವು ಇದೆ. == ಕಲಾಕೃತಿ == ಹದಿನಾರನೆಯ ತೀರ್ಥಂಕರರಾದ ಶ್ರೀ ಶಾಂತಿನಾಥ ಸ್ವಾಮಿಯವರು ಇಲ್ಲಿ ಪೂಜೆಗೊಳ್ಳುವ ತೀರ್ಥಂಕರರು. ಈ ತೀರ್ಥಂಕರರ ಮೂರ್ತಿಯು ಶಿಲೆಯಾಗಿದ್ದ ಪ್ರಭಾವಲಯ ಅರ್ಧ ವೃತ್ತಾಕಾರದಲ್ಲಿದೆ . ಇದರಲ್ಲಿ ಮಕರತೋರಣವಿದ್ದು ತೀರ್ಥಂಕರರ ಮೂರ್ತಿಯೂ ಖಡ್ಗಾಸನ ಭಂಗಿಯಲ್ಲಿದೆ. ಸ್ವಾಮಿಯ ಎಡಬದಿಯಲ್ಲಿ ಗರುಡ ಯಕ್ಷ, ಬಲಬದಿಯಲ್ಲಿ ಮಹಾ ಮಾನಸಿ ಯಕ್ಷಿ ಇದ್ದಾರೆ. ಕೈಯಲ್ಲಿ ತ್ರಿಶೂಲ, ಡಮರು ಮುಂತಾದ ಆಯುಧಗಳಿದ್ದು ಮೂರ್ತಿಯ ಕೆಳಗೆ ಲಾಂಛನವಿದೆ. ತೀರ್ಥಂಕರರ ಮೂರ್ತಿಯು ನಗುಮುಖದಿಂದ ಪ್ರಸನ್ನತೆಯನ್ನು ಸೂಸುವಂತಿದೆ. == ಧಾರ್ಮಿಕ ಕಾರ್ಯಗಳು == ಶ್ರೀ ಸ್ವಾಮಿಗೆ ಅಷ್ಟಮಹಾಪ್ರತಿಹಾಯಗಳಾದ ಚಾಮರ, ಮುಕ್ಕೊಡೆ, ಪುಷ್ಪವೃಷ್ಟಿ, ದಿವ್ಯ ಧ್ವನಿ ಇತ್ಯಾದಿ ಪುಜೆಗಳು ಇವೆ. ಕ್ಷೇತ್ರಪಾಲನ ಪೂಜೆ, ವಾಸ್ತು ಪೂಜೆ , ವಾಯು ಪೂಜೆ, ಮೇಘ ಪೂಜೆ, ಭೂಮಿಪೂಜೆಗಳಾದ ನಂತರ ಸ್ವಾಮಿಯ ಪೂಜೆಯು ಆಗುತ್ತದೆ . ಅನಂತರ ಹೊರಗಡೆ ಬ್ರಹ್ಮದೇವ, ಕ್ಷೇತ್ರಪಾಲ ಮತ್ತು ಅಮ್ಮನವರ ಪೂಜೆಯಾಗಿ ಕ್ಷೀರಾಭಿಷೇಕವಾಗುತ್ತದೆ. ಸ್ವಾಮಿಗೆ ಹಾಲು, ಗಂಗಾಜಲ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಇಲ್ಲಿ ದಿನಕ್ಕೆ ಒಂದು ಬಾರಿ ನಿತ್ಯ ಪೂಜೆ, ಅಭಿಷೇಕ ಪೂಜೆಯು ನಡೆಯುತ್ತದೆ . ಅದು ಬೆಳಗ್ಗೆ ೯.೩೦ ರಿಂದ ೧೧ ಗಂಟೆಯ ವರೆಗೆ ನಡೆಯುತ್ತದೆ. ದಶದಿಕ್ಪಾಲಕರ ಕಲ್ಲುಗಳು ಈ ಬಸದಿಯ ಸುತ್ತಲೂ ಇವೆ. ಇಲ್ಲಿ ಜಲ, ಗಂಧ, ಹಾಲು, ಪಂಚಾಮೃತ ಮುಂತಾದ ಅಭಿಷೇಕ ಸೇವೆಗಳು ನಡೆಯುತ್ತವೆ. ವಿಶೇಷ ದಿನಗಳೆಂದರೆ ತಿಂಗಳಲ್ಲಿ ನಡೆಯುವ ಅಮಾವಾಸ್ಯೆ ಮತ್ತು ಪಾಡ್ಯದ ದಿನದಂದು ನಡೆಯುವ ಪೂಜೆ ವಿಶೇಷ. ಇದು ಆದ ಐದನೇ ದಿನದ ನಂತರ ನಾಗರ ನಾಗರ ಪಂಚಮಿ ಪೂಜೆಯ ವಿಶೇಷವಾಗಿ ನಡೆಯುತ್ತದೆ ಹಾಗೆಯೇ ನವರಾತ್ರಿ ಪೂಜೆ ವರ್ಷದಲ್ಲಿ ಒಮ್ಮೆ ನಡೆಯುವ ಪೂಜೆಯಾಗಿದೆ. ಹೊಸ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುವ ಚಂದ್ರಮಾನ ಯುಗಾದಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ತಿಂಗಳ ಅಮಾವಾಸ್ಯೆಯಂದು ಹಣ್ಣುಕಾಯಿ ಪೂಜೆ ಮತ್ತು ಹೂವಿನ ಪೂಜೆ ನಡೆಯುತ್ತದೆ. == ಸಧ್ಯದ ಸ್ಥಿತಿ == ಇಲ್ಲಿನ ಕಂಬಗಳು ಮರ ಕಲ್ಲಿನಿಂದ ಕಟ್ಟಿ , ಸಿಮೆಂಟಿನಿಂದ ಬಲ ಗೊಳಿಸಲಾಗಿದೆ. ಕಂಬಗಳು ಮೇಲಾಗಲಿ ಗೋಡೆಯ ಮೇಲೆ ಯಾವುದೇ ಚಿತ್ರಗಳು ಆಕೃತಿಗಳು ಕಂಡುಬರುವುದಿಲ್ಲ . ಗೋಪುರವನ್ನು ದೇವರ ದರ್ಶನಕ್ಕಾಗಿ ಬಂದ ಜನರಿಗೆ ಕುಳಿತುಕೊಳ್ಳಲು ಉಪಯೋಗಿಸಲಾಗುತ್ತದೆ. ಗರ್ಭಗೃಹದ ಮೇಲೆ ಮೇಗಿನ ನೆಲ ಎಂಬುದಿದೆ ಅಲ್ಲಿ ೧೬ನೇ ತೀರ್ಥಂಕರರಾದ ಶ್ರೀ ಶಾಂತಿನಾಥ ಸ್ವಾಮಿ ಮೂರ್ತಿಯನ್ನು ಪೂಜಿಸಲಾಗುತ್ತದೆ. == ಉಲ್ಲೇಖಗಳು ==